15 March, 2014
Canvas App / Serious Paint App Paintings
Thanks to these app developers:
https://play.google.com/store/apps/details?id=com.guynoir.PaintShopPro
https://play.google.com/store/apps/details?id=com.creativesciences.spaint.free
21 July, 2013
20 April, 2013
16 April, 2013
ಎನ್ನ ಹೊಸಬನ ಮಾಡಯ್ಯ ತಂದೆ..
(ಇದು 'ವಿಜಯವಾಣಿ' ಸಾಪ್ತಾಹಿಕ 'ವಿಜಯ ವಿಹಾರ'ದಲ್ಲಿ ಪ್ರಕಟವಾದ ಬರಹ, ಮೂಲ ಬರಹಕ್ಕಾಗಿ ಇಲ್ಲಿ ಕ್ಲಿಕ್ಕಿಸಿ)
ಇದೇ ಈಗಷ್ಟೇ ಕಳೆದಿದೆಯಲ್ಲ ಹೊಸ ಸಂವತ್ಸರದ ಯುಗಾದಿ. ನಮ್ಮಲ್ಲಿ ಹಲವರಲ್ಲಿ ಹಲವರು ಅಂದುಕೊಂಡಿದ್ದೆವಲ್ಲ ಹೊಸಾ ವರ್ಷ, ಹೊಸ ಹೊಸಾ ರೆಸಲ್ಯುಷನ್, ಹೊಸಾ ಲೈಫು ಶುರು ಮಾಡಬೇಕು ಅಂತ. ಆಯಿತು ಅಂದೇ ಕೊನೆ. ಹಾಗೆಯೇ ಅದನ್ನೆಲ್ಲ ಕಾಲಡಿಗೆ ಹಾಕಿ ಮರೆತಿದ್ದೇವೆ. ಈ ಹೊಸತು ಅಂದರೇನು, ಹೊಸಬನಾಗುವುದೆಂದರೆ ಏನಪ್ಪಾ?
ಒಮ್ಮೆಲೇ ಪ್ಲೇಟ್ ತಿರುಗಿ ಎಲ್ಲ ಬದಲಾಗಿಬಿಡುತ್ತದಾ? ಇದ್ದಕ್ಕಿದ್ದಂತೆ ಹೊಸ ಭಾಷೆಯೊಂದರಲ್ಲಿ ಬದುಕಿದಂತೆ ಬದುಕುವುದಾ? ನಿನ್ನೆ ಬದುಕಿದ್ದಿತ್ತಲ್ಲ, ಅದನ್ನೆಲ್ಲ ಬುಡಸಮೇತ ಕಿತ್ತು ಮನೆಯ ಹಿಂಬದಿಯಲ್ಲಿ ಕಾಂಪೋಂಡಿನಾಚೆ ಎಸೆದು ಬಂದುಬಿಡುವುದಾ? ಹಳತಾಗಬಾರದೆಂದು ಹೋರಾಡುತ್ತ ದಕ್ಕಿಸಿಕೊಂಡದ್ದೇ ಹೊಸತಾ? ಅದೇ ದೂಳು ತುಂಬಿದ ಶಹರದ ಮಾಸಲುಗಟ್ಟಿದ ಮನೆಗಳು, ಕಾರ್ಬನ್ ಡೈ ಆಕ್ಸೈಡ್ ಎಳೆದುಕೊಳ್ಳಲೂ ಜಾಗವಿಲ್ಲದಂತೆ ದೂಳು ತುಂಬಿಕೊಂಡ ಮರದೆಲೆಗಳು ತಿಂಗಳ ಒಂದೇ ಸಂಜೆಮಳೆಗೆ ತೊಪ್ಪೆ ತೊಯ್ದು ಫಳಫಳ ಹೊಳೆಯುತ್ತಾವಲ್ಲ, ಅದಾ ಹೊಸತಾಗುವಿಕೆ ? ಅದೇ ಮಳೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಪ್ಲಾಸ್ಟಿಕ್ಕಿನ ಪಾಕೀಟುಗಳು ತೇಲಿಹೋಗಿ ಈಗಷ್ಟೇ ಒಣಗಿ ನಿಂತ ಮಣ್ಣು ಹೊಸದಾಗುತ್ತದಾ? ಇಲ್ಲ ಹೊಚ್ಚಹೊಸ ಬಟ್ಟೆ ತೊಟ್ಟು ಬೆಳ್ಳಂಬೆಳಗ್ಗೆ ಹೊರಡುತ್ತೇವಲ್ಲ ಅದಾ?
ನಮಗೆ ಹೀಗೆ ಕೇಳುವ ರೂಡಿ `ಏನಪ್ಪಾ ಹೇಗಿದ್ದೀಯಾ?' ಅದಕ್ಕೆ ಅವನು ಹೇಳುತ್ತಿರುತ್ತಾನೆ: `ಏನಿಲ್ಲ ಮಾರಾಯಾ, ಅದೇ ಲೈಫು, ಅದೇ ಬೋರಿಂಗ್ ದಿನಚರಿ. ಹೊಸತೇನೂ ಇಲ್ಲ'. ಎಂದೂ ಮನೆಯಲ್ಲಿರದ ಗಂಡ ಈ ಭಾನುವಾರ ಮನೆಯಲ್ಲೇ ಇದ್ದರೆ ಹೊಸಬನಾಗಿ ಕಾಣುತ್ತಾನೆ. ಟಿ.ವಿ. ರಿಮೋಟ್ ಬಿಟ್ಟು ಮಗನ ಡ್ರಾಯಿಂಗ್ ಬುಕ್ಕಿನಲ್ಲಿನ ಓಡುತ್ತಲಿರುವ ಕಾರನ್ನು ನೋಡುತ್ತಿದ್ದರೆ ಮಗನಿಗೆ ಹೊಸ ಅಪ್ಪನಾಗಿ ಕಾಣುತ್ತಾನೆ. ಹಾಗಿದ್ದರೆ ಹೊಸತನವೆಂಬುದು ಸಾಪೇಕ್ಷವಾ? ನಾವಂತೂ ಅಕ್ಕಪಕ್ಕದಲ್ಲೇ ಇದ್ದೂ ಒಂದು ರೀತಿಯ ಅಪರಿಚಿತತೆಯಲ್ಲೇ ಬದುಕುತ್ತಿರುತ್ತೇವೆ. ಅದು ಹೊಸತನವಾ? ದಿನವೂ ಬಾಲ್ಕನಿಗೆ ಬಂದು ಟವೆಲ್ ಒಣಗಿಸುವ ಹೆಂಗಸಿಗೂ ಅದೇ ಸಮಯಕ್ಕೆ ನೈಟಿ ಒಣಗಿಸಬರುವ ಯುವತಿಗೂ ಒಬ್ಬರಲ್ಲೊಬ್ಬರಿಗೆ ಇರುವ ಕುತೂಹಲ ಹೊಸತಾ?
ಈ ಪ್ರಾಣಿ ಜಾತಿಯದಕ್ಕೆ ಹಾಗೆಯೇ ಹಳತಾಗಿಬಿಡುವ ಒಂದು ಪ್ರಕ್ರಿಯೆ ರೂಡಿಯಾಗಿರುತ್ತದೆ. ಅದೇ ಬಣ್ಣ, ವಾಸನೆ, ಶಬ್ದಗಳು ಹಳತಾಗಿಬಿಡುತ್ತವೆ. ಕಣ್ಣೆದುರಲ್ಲಿ ಸರಿದ ಸ್ಲೈಡುಗಳೆಲ್ಲ ಮರುನಿಮಿಷಕ್ಕೆ ಹಳತಾಗಿಬಿಡುತ್ತವೆ. ಇದೀಗ ಬಂದ ಸುದ್ದಿ ಕೇಳಿ ಮುಗಿಯುವಷ್ಟರಲ್ಲಿ ಹಳತು. ಟೀವಿಯಲ್ಲಿ ಏನುಂಟು ಹೊಸತು? ಅದೇ ಹಳೆ ಸೀರಿಯಲ್ಲು, ರಿಯಾಲಿಟಿ ಶೋ. ಅಂಥಾದ್ದರಲ್ಲಿ ಹೊಸತಾಗುವುದು ಎಂದರೇನು ಭಾಯ್?
ಹೊಸತನವೆನ್ನುವುದು ಒಂದು ರೀತಿಯಲ್ಲಿ ಕಂಬಳಿಹುಳ ಚಿಟ್ಟೆಯಾದಂತೆ. ಜೀವ ಅದೇ - ರೂಪು ಬೇರೆ, ಭಾವ ಬೇರೆ. ಸದ್ದಿರದೆ ಕತ್ತಲೊಂದು ಸರಿದು ಹೊಸ ಹಗಲಿನ ಕಮಾನು ತೆರೆದುಕೊಂಡಂತೆ, ಅವೆರಡರ ನಡುವೆ ಬದಲಾದದ್ದು ಎಲ್ಲಿ ಎಂದು ಹುಡುಕುತ್ತ ಕೂತರೆ ಸೋಲುತ್ತೇವೆ. ಎಲೆಗಳ ಬೊಗಸೆಯಲ್ಲಿ ಕಾಣುವ ಹೊಸದೊಂದು ಆಕಾಶ ನಾವಾಗಬೇಕು ಅಷ್ಟೇ. ತಿಂದು ಮುಸುರೆ ಮಾಡಿದ ಪಾತ್ರೆಗಳು ನೀರು ಹರಿದು ಹೊಸದಾಗುತ್ತವೆ. ಆಫೀಸಿನ ನಿನ್ನೆಯ ಗ್ಲಾಸಿನ ಬಾಗಿಲುಗಳು ಸೋಪಿನ ನೀರು ಚಿಮುಕಿಸಿಕೊಂಡು ಫಳ ಫಳ. ಫಿನಾಯಿಲ್ನಲ್ಲಿ ಈಗಷ್ಟೇ ತೊಳೆದ ನೆಲ ಫಳಾ ಫಳಾ... ಮತ್ತೆ ಮಳೆಯೆಂದರೆ ಹೊಸತು, ಕಿಟಕಿಯ ನಡುವಿನಿಂದ ಇಷ್ಟೇ ಒಳನುಗ್ಗಿ ನಮ್ಮ ಕೆನ್ನೆಗೂ ಎರಡು ಬಾರಿ ಸವರಿ ಗೆರೆಗೆರೆಯಾಗಿ ಕಿಟಕಿಯ ಹೊರಗೆ ಸುರಿವ ಮಳೆ ಬೆಚ್ಚಗಿನ ಹೊಸತು. ಬೆಳಗ್ಗೆ ಎದ್ದು ದಾಡಿಗೀಡಿ ಮಾಡಿಕೊಂಡ ಅವನು ಹೆಂಡತಿಯ ಪೌಡರನ್ನು ಅವಳಿಗೆ ಗೊತ್ತಾಗದಂತೆ ಇಷ್ಟೇ ಬಳಿದುಕೊಂಡು ಕನ್ನಡಿಯೆದುರು ಚೆಲ್ಲಿ ಏನೂ ಗೊತ್ತಿಲ್ಲದವನಂತೆ ಕನ್ನಡಿಯಲ್ಲಿ ಎರಡೆರಡು ಬಾರಿ ಮುಖ ನೋಡಿಕೊಂಡು ಒಳಗೊಳಗೇ ನಾಚುತ್ತಾ `ಪೆಹಲಾ.. ಪೆಹಲಾ ಪ್ಯಾರ್' ಎಂದೇನೋ ಗುನುಗುತ್ತಾ ಹೊರಡುತ್ತಾನೆ, ಹೊಸಬನಾಗುತ್ತಾನೆ.
ಹೊಸತು ಎಂದಕೂಡಲೇ ಹಳೆ ಫೋಟೋಗಳು ನೆನಪಾಗುತ್ತವೆ. ಆ ಫೋಟೋಗಳು ಹಳತಾಗಿರಬಹುದು, ಅದರೊಳಗಿನ ನಗು? ಅದು ಹಳತಾಗಲು ಸಾಧ್ಯವೇ? ಹೇಗೆ ನಗುತ್ತಿದ್ದೆ ನೋಡು ಎನ್ನುತ್ತ ಅದೇ ತರಹ ಈಗಲೂ `ಹೆ ಹೆ...' ಎಂದು ನಗುತ್ತೇವೆ ಎಂದಾದಮೇಲೆ ಹಳತಾಗುವ ಮಾತೆಲ್ಲಿ? ಬೆಳಗ್ಗೆ ಎದ್ದು ಬಾಗಿಲು ತೆರೆದು ಕಿಟಕಿಯ ಪರದೆ ಸರಿಸಿ ಹೊಸ ಹಗಲನ್ನು ನಮ್ಮೊಳಗೆ ಆವಾಹಿಸಿಕೊಳ್ಳುವ ಪರಿಯಿರುತ್ತದಲ್ಲ, ಅಲ್ಲಿಂದ ಆರಂಭವಾಗುತ್ತದೇನೊ ಹೊಸತನ. ಹೊರಗೆ ನೋಡಿದರೆ ಅರೇ.. ಎದುರು ಮನೆಯ ಅಂಗಳದಲ್ಲಿ ಸಾರಿಸಿಟ್ಟ ನೆಲಕ್ಕೆ ಹೊಚ್ಚ ಹೊಸ ರಂಗೋಲಿ. ರಸ್ತೆಯ ಹಳದಿದೀಪ ನಂದಿ ಬಾಗಿಲ ಬಳಿ ಬಂದರೆ ನೇತು ಹಾಕಿದ ಚೀಲದಲ್ಲಿ ಹಾಲಿನ ಪ್ಯಾಕೆಟ್ಟು, ಪ್ರಿಂಟಾಗಿ ಈಗಷ್ಟೇ ಹೊರಬಂದ ನಿಜಕ್ಕೂ ಬಿಸಿಬಿಸಿ ಪೇಪರ್ರು, ಒಳಗೆ ಸ್ಟೋವಿನ ಮೇಲೆ ಕುದಿಯುತ್ತಿರುವ ಬಿಸಿಬಿಸಿ ನೀರು. ಹೊಸತನದ ಬೆಳಕೊಂದು ಅಪರಿಮಿತ ಪ್ರೀತಿಯಲ್ಲಿ ಕತ್ತಲೆಯನ್ನು ಹಿಂದಕ್ಕೆ ತಳ್ಳುತ್ತ ಪದರು ಪದರಿನಲ್ಲಿಯೂ ಚಲಿಸತೊಡಗುತ್ತದೆ.
ನನಗೆ ಆ ಪುಸ್ತಕ ಓದುವಾಗ ಪ್ರತಿ ಬಾರಿ ಹೊಸತೆನಿಸುತ್ತದೆ, ಹೊಸದೇನೋ ಹೊಳೆಯುತ್ತದೆ ಎನ್ನುತ್ತೇವೆ. ಒಂದು ರಾಗ - ಮತ್ತೆ ಮತ್ತೆ ಕೇಳಿದಾಗಲೂ ಹೊಸತೇನೋ ಅನುಭವ. ಆ ಜಾಗಕ್ಕೆ ಹೋದರೆ ಏನೋ ಹೊಸತೆನಿಸುತ್ತದೆ ಎನ್ನುತ್ತೇವೆ. ಹೊಸತನವೆನ್ನುವುದು ಅನುಭವ, ಆ ಪುಸ್ತಕವನ್ನು ಮತ್ತೆ ಓದಿದಾಗ ನಾವು ಮತ್ತಷ್ಟು ಆಯಾಮಗಳಲ್ಲಿ ಕಾಣುತ್ತೇವೆ, ಮನಸ್ಸಿಗೆ ಬೇಕಾದ ಹೊಸವಿನ್ಯಾಸ ತೆರೆದುಕೊಳ್ಳುತ್ತದೆ. ಇದ್ದಲ್ಲೇ ಹೊಸಬರಾಗುತ್ತೇವೆ. ಹೊಸ ಗುರುತು ನಮ್ಮದಾಗುತ್ತದೆ. ಪುಟ್ಟಮಗುವನ್ನು ಎತ್ತಿಕೊಂಡಾಗ ನಾವೆಲ್ಲ ಹೊಸಮಕ್ಕಳಾಗುವುದಿಲ್ಲವೇ? ಒಣಹಾಕಿದ ಬಟ್ಟೆಯಿರುತ್ತದಲ್ಲ, ಅದಕ್ಕೆ ಇಷ್ಟೇ ಇಷ್ಟು ಕೆನ್ನೆ ತಾಗಿಸಿ ಒತ್ತಿಕೊಂಡರೆ ತಂಪು ತಂಪು. ಹೊಸತನವೆಂದರೆ ಅಂಥದ್ದು. ನಮ್ಮ ಸುತ್ತಲೇ ಹರಡಿರುತ್ತದೆ.
ನಾಳೆ ಬೆಳಗಾದರೆ ಮೊದಲೆಂದೂ ಆಡದ, ನಮಗೆ ಸಂಬಂಧಿಸಿಲ್ಲದ ಭಾಷೆಯಲ್ಲಿ ಮಾತಾಡತೊಡಗುತ್ತೇನೆ ಎಂದು ಹೊರಟರೆ ಅನಾಹುತವಾಗುತ್ತದೆ, ಹೊಸವರ್ಷದ ರೆಸಲ್ಯೂಷನಿನಂತೆ! ಮಹಾನಗರಗಳಲ್ಲಿ ಇಂದು ಸಿಕ್ಕ ಮುಖ ನಾಳೆ ಸಿಕ್ಕರೆ ಹೇಳಿ. ಅದೇ ಬಸ್ಸು, ಅದೇ ಸ್ಟೇಷನ್ನು, ಅದೇ ಕಾಯುವ ಜನ. ಆದರೆ ಮುಖಗಳು ಬೇರೆ ಬೇರೆ. ನಿನ್ನೆ ಪಕ್ಕದಲ್ಲಿ ನಿಂತು ತಮಾಷೆ ಮಾಡಿದವನು ಇಂದಿರುವುದಿಲ್ಲ. ಬಿಸಿಬಿಸಿ ಮಸಾಲೆದೋಸೆ, ಪಕ್ಕದಲ್ಲಿ ಜೊರ್ರನೆ ಹಾಲನ್ನೆತ್ತಿ ಸುರಿಯುತ್ತಿರುವ ಹುಡುಗನ ಕೈಲಿನ ಚಹಾ ಕೆಟಲಿನಿಂದ ಹೊರಡುವ ಕಂಪಿನ ಹಬೆ ಹೊಸತಲ್ಲದೆ ಮತ್ತಿನ್ನೇನು? ಅದೇ ನದಿಗೆ, ಹರಿವ ನೀರು ಹೊಸತು. ಇರುವಿಕೆಯೆಂಬುದು ಹೊಸದಲ್ಲ, ಹೊಸದೆಂದರೆ ಇರುತ್ತ ಬೆಳೆಯುವುದು. ಸ್ಕೂಲಿಗೆ ಹೊರಡಲು ರೆಡಿಯಾಗಿ ಆಡುತ್ತ ನಿಂತ ಪುಟ್ಟಿಯ ತಲೆಯನ್ನು ಮೆತ್ತಗೆ ನೇವರಿಸಿದಂತೆ, ಕಣ್ಣಿನಲ್ಲಿ ಕನಸು ರೆಕ್ಕೆ ಬಿಚ್ಚಿ ಚಲಿಸತೊಡಗುತ್ತದೆ. ಸುತ್ತಲಿನ ಹೊಸದೇ ಲಯವೊಂದರಲ್ಲಿ ನಾವೂ ಒಂದಾಗುತ್ತೇವೆ. ಬೆಚ್ಚಗಿನ ಬಯಕೆಗಳಿಂದ ಬದುಕನ್ನು ತಬ್ಬಿಕೊಳ್ಳಬೇಕು. ಜುಮುರುಮಳೆ ಹೊಸಕಂಪ ಹೊತ್ತು ತರುತ್ತದೆ.
`ಹೊಸತನವೆ ಬಾಳು; ಹಳಸಿಕೆಯಯೆಲ್ಲ ಸಾವು ಬಿಡು
ರಸವು ನವನವತೆಯಿಂದನುದಿನವು ಹೊಮ್ಮಿ
ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ
ಪಸರುತಿರೆ ಬಾಳ್ ಚೆಲುವು ಮಂಕುತಿಮ್ಮ'
ಎನ್ನುತ್ತಾರೆ ಡಿವಿಜಿ.
ಹೌದು, ಹೊಸತೆಂದರೇ ಹಾಗೆ. ನುಡಿಯಲ್ಲಿ ನೋಟದಲ್ಲಿ ಹೀಗೆ ಸ್ವಲ್ಪವೇ ದಿಟ್ಟಿಯಿಟ್ಟು ನೋಡಿದರೆ ಕಣ್ಣೆದುರಿನ ಮೂರ್ತ ಕನ್ನಡಿಯಲ್ಲಿ ಹೊಸ ನಾವು ನೀವು
17 February, 2013
19 December, 2012
song of the body,song of the soul..
When you dance,I wish
you a wave o' the sea, that
you might
ever do nothing but
that
-William Shakespeare
'ಛಂದ ಪುಸ್ತಕ' ಪ್ರಕಟಿಸಿದ ಜಯಶ್ರೀ ಭಟ್ ಅನುವಾದಿಸಿದ 'ಮಾವೋನ ಕೊನೆಯ ನರ್ತಕ' ಪುಸ್ತಕಕ್ಕೆ ರಚಿಸಿದ್ದ ಚಿತ್ರಗಳಿವು
01 November, 2012
15 October, 2012
ಇಲ್ಲಸ್ಟ್ರೇಷನ್
"..ದೂರ ದೂರದವರೆಗೆ ಹಬ್ಬಿ ನಿಂತ
ತೋಟಗಳು, ನಡುಬಾಗಿಸಿದ ರೈತರು.
ಹೀಗೆ ಹೂಜಿ ಒಂದು ಬಲಿಷ್ಠ ರಾಷ್ಟ್ರ.
ಒಮ್ಮೊಮ್ಮೆ ಅದರ ಖಾಲಿತನ ತುಂಬಲಿಕ್ಕೆ
ತಯಾರಿ ನಡೆಯುತ್ತೆ. ಅದು
ರಾಜನ ಅಧಿಕಾರಕ್ಕೆ
ಸೂಳೆಯ ಮೊಲೆತುರಿತಕ್ಕೆ
ವಿದೂಷಕನ ವ್ಯಂಗ್ಯಕ್ಕೆ.."
-ರವಿ ದ್ರಾವಿಡ (ಒಂದು ಹೂಜಿ ಮತ್ತು ಕವಣೆ ಏಟು)
* ಇದು ರವಿ ದ್ರಾವಿಡರ 'ಒಂದು ಹೂಜಿ ಮತ್ತು ಕವಣೆ ಏಟು' ಕವಿತೆಗೆ ಬಿಡಿಸಿದ ಇಲ್ಲಸ್ಟ್ರೇಷನ್, ಮೇಲಿನವು ಇದೇ ಕವಿತೆಯಿಂದ ಆಯ್ದ ಸಾಲುಗಳು.
Posted by
venkat.bhats
at
Monday, October 15, 2012
Labels:
art,
illustration,
ಕವಿತೆ,
ಚಿತ್ರ,
ರವಿ ದ್ರಾವಿಡ
No comments:
12 October, 2012
02 October, 2012
ಬೇರು-ಬಿಳಲು
ನಮ್ಮಲ್ಲಿ ಹಲವರು ಹೊಟ್ಟೆಪಾಡಿಗೋ ಅನಿವಾರ್ಯಕ್ಕೋ ಕಟ್ಟುಬಿದ್ದು ನಮ್ಮ ಮೂಲವನ್ನು ಬಿಟ್ಟು ಬಂದವರು,ನಾವು ಮೂಲದೆಡೆಗೆ ತುಡಿಯುತ್ತಲೇ ಇಲ್ಲಿನ ನಗರೀಕರಣ ವ್ಯವಸ್ಥೆಗೆ, ಯಾಂತ್ರಿಕತೆಯ,ಜಾಗತೀಕರಣ, ಉದಾರೀಕರಣ,ಬಂಡವಾಳಶಾಹಿತ್ವದ ಅನಿವಾರ್ಯಕ್ಕೆ ಒಗ್ಗಿಕೊಳ್ಳುತ್ತ ದಿನೇದಿನೇ ನಮ್ಮ ನೈಜತೆಯನ್ನ ಕಳೆದುಕೊಳ್ಳುತ್ತಿದ್ದೇವೆ, ಸಮಯವೋ ಮೇಲಧಿಕಾರಿಯೋ ಯಾವುದೋ ಕಾಣದ ಕೈ ನಮಗೂ ತಿಳಿಯದಂತೆ ನಮ್ಮನ್ನು ನಿಯಂತ್ರಿಸುತ್ತಿದೆ, ಎಲ್ಲಿಯವರೆಗೆಂದರೆ ಈ ನಿಯಂತ್ರಣವಿಲ್ಲದೇ ಅಸ್ತಿತ್ವವಿಲ್ಲವೆಂಬಂತೆ. ಕೊನೆಕೊನೆಗೆ ಬಣ್ಣವಿಲ್ಲದ ಒಂದು ಪೀಳಿಗೆ ನಮ್ಮದಾಗುತ್ತ ನಡೆದಿದೆ, ಬೇರೂ ಇಲ್ಲ ಬಿಳುಲೂ ಇಲ್ಲ. ಇಂತದ್ದೇ ಪರಿಸರವೂ ಸುತ್ತ ಬೆಳೆಯುತ್ತ ಬಂದಂತೆ ಬೇರಿನ ಹಂಗಿಲ್ಲದ ಯಾಂತ್ರಿಕತೆಯೇ ಪ್ರಿಯವಾಗುತ್ತ ನಮ್ಮನ್ನು ನಾವು ನಿರ್ವಾತದಲ್ಲಿ ಬಂದಿಸಿಕೊಳ್ಳುತ್ತ ಸಾಗಿದ್ದೇವೆ,ನಿಧಿಯಂತೆ ಅವುಚಿಕೊಂಡು ತಂದಿದ್ದ ಕನಸುಗಳು ನಮ್ಮ ಪರಿವೆಯೇ ಇಲ್ಲದೇ ಬಣ್ಣಕಳೆದುಕೊಂಡ ಗೊಂಬೆಗಳಾಗುತ್ತಿವೆ.ಸತ್ವಹೀನತೆಯೊಳಗೆ ಕುಳಿತು ನಮ್ಮ ಒಳತುಡಿತವನ್ನು ಗ್ರಹಿಸುವ ಸೂಕ್ಷ್ಮತೆಯನ್ನ ಕಳೆದುಕೊಳ್ಳುತ್ತ ನಾವೇ ನಮ್ಮನ್ನು ಸ್ಪಂದಿಸದಷ್ಟು ಘನೀಭವಿಸುವ ಪ್ರಕ್ರಿಯೆಗೆ ಒಡ್ಡಿಕೊಳ್ಳುತ್ತ ನಡೆದಿದ್ದೇವೆ.
ಇದು 'ಮುಗುಳು' ಪತ್ರಿಕೆಗೆ ಮಾಡಿದ ಚಿತ್ರ, ಈ ಸಲದ ಮುಗುಳು ಒಳ್ಳೊಳ್ಳೇ ಲೇಖನಗಳಿಂದ ಕೂಡಿದೆ. ಈ ಇ ಪೇಪರ್ ವರ್ಶನ್ನಲಿಂಕಿನಲ್ಲಿ ಬಿಡುವಾದಾಗ ನೀವೂ ಮುಗುಳು ಓದಬಹುದು, ಡೌನ್ಲೋಡ್ ಕೂಡ ಮಾಡಿಟ್ಟುಕೊಳ್ಳಬಹುದು.
Posted by
venkat.bhats
at
Tuesday, October 02, 2012
Labels:
art,
ಅನಿಸಿಕೆ,
ಚಿತ್ರ,
ಮುಗುಳು,
ರೂಪರೇಖೆ
No comments:
30 September, 2012
16 September, 2012
ಜಗತ್ತಿನ ಕಣ್ಣಿನಲ್ಲಿ ಕಾವ್ಯವನ್ನು ನೋಡುವ ಕವಿ..
ರಮೇಶ್ ಅರೋಲಿಯವರಿಗೆ,
ಆರಾಮಿದ್ದೀರಾ? ನಿಮ್ಮ ಕವನ ಸಂಕಲನ 'ಎಳೆಯ ಪಾಪದ ಹೆಸರು ನಿಮ್ಮಿಚ್ಛೆಯಂತೇ ಇಟ್ಟುಕೊಳ್ಳಿ' ಯನ್ನು ಓದಿದೆ. ಇಷ್ಟವಾಯ್ತು ಮತ್ತು ತುಂಬ ಖುಷಿಯಾಯ್ತು. ಕಲವೊಮ್ಮೆ ಇಷ್ಟವಾದ ಬರಹಗಳ ಬಗ್ಗೆ ಅನ್ನಿಸಿದ್ದನ್ನು ಹಂಚಿಕೊಳ್ಳುತ್ತಿರುತ್ತೇನೆ. ಇದೂ ಹಾಗೇ ಒಂದು ಅನಿಸಿಕೆಯೇ ಹೊರತು ಗಂಭೀರವಾಗಿ ತೆಗೆದುಕೊಳ್ಳಬೇಕಾದದ್ದಲ್ಲ.
ನಿಮ್ಮ ಕಾವ್ಯ ಭಾಷೆಯಲ್ಲಿ ಗುಂಗು ಹಿಡಿಸುವ ಗಝಲ್ಗಳ ಮತ್ತಿದೆ. ಮತ್ತೆ ಮತ್ತೆ ಕಾಡುವ ದಟ್ಟ ವಿಷಾದವಿದೆ. ಹರಿತ ಅಲಗುಗಳ ಪ್ರತಿರೋಧವಿದೆ. ಜೊತೆಗೆ ಮತ್ತೆ ಮತ್ತೆ ಮಜಾಕ್ಕೆ ಕೂಡ ಓದಿಕೊಳ್ಳಬೇಕೆನಿಸುವ ಲಯ ಲಾಲಿತ್ಯ ಇದೆ. ಈ ವಿಶಿಷ್ಟ ಸಂಕರಗಳಿಂದಲೇ ನಿಮ್ಮ ಕಾವ್ಯ ಆಪ್ತವಾಗುತ್ತದೆ, ಬೆರಗು ಹುಟ್ಟಿಸುತ್ತದೆ.
ನೀವು ಈ ಜಗತ್ತಿನ ಜಂಜಡಗಳಿಂದ, ಗದ್ದಲಗಳಿಂದ ಬೇರೆ ಕೂತು ನಿರ್ವಾತದಲ್ಲಿ ಕಾವ್ಯವನ್ನು ಕೇವಲ 'ಕಟ್ಟುವ ಕಲೆ'ಯಾಗಿ ಪ್ರಾಕ್ಟಿಸ್ ಮಾಡುತ್ತಾ ಕಳೆದುಹೋಗುವ ಕವಿಯಲ್ಲ. ಸುತ್ತಲಿನ ಜಗತ್ತಿಗೆ, ಅದರ ಆಗು ಹೋಗುಗಳಿಗೆ ತೆರೆದುಕೊಂಡು ಅದಕ್ಕೆ ತೀವ್ರವಾಗಿ ಸ್ಪಂದಿಸುವ ಒತ್ತಡದಲ್ಲಿ ಬರೆಯುವ ಮತ್ತು ಈ ಜಗದ ಎಲ್ಲ ಕ್ರೌರ್ಯಗಳ, ದುರಂತ ನೋವು ದಾರುಣತೆಗಳ ಜೊತೆಯಲ್ಲೇ ತಾನೂ ಬೆಳೆಯಬೇಕು ಎಂಬ ಎಚ್ಚರವಿರುವ ಸಹೃದಯಿ. (ನಿಮ್ಮ ಅನೇಕ ಕವನಗಳ ಕೊನೆಗೆ ಕೊಟ್ಟಿರುವ ಟಿಪ್ಪಣಿಯೂ ಇದಕ್ಕೆ ಪುಷ್ಟಿ ನೀಡುತ್ತದೆ) ನೇರವಾಗಿ ಹೇಳಬೇಕೆಂದರೆ ನಿಮಗೆ ಶ್ರೇಷ್ಠ ಕವಿಯಾಗಿ ಆ ಕಣ್ಣಿಂದ ಜಗತ್ತನ್ನು ನೋಡುವುದಕ್ಕಿಂತ ಒಳ್ಳೆಯ ಮನುಷ್ಯನಾಗಿ ಜಗತ್ತಿನ ಕಣ್ಣಲ್ಲಿ ಕಾವ್ಯವನ್ನು ನೋಡುವುದು ಮುಖ್ಯ ಅಂದುಕೊಂಡವರು ನೀವು ಅನ್ನಿಸಿತು.
ಸಂಕಲನದ 'ಎಳೆಯ ಪಾಪದ ಹೆಸರು ನಿಮ್ಮಿಚ್ಛೆಯಂತೇ ಇಟ್ಟುಕೊಳ್ಳಿ' ಎಂಬ ಹೆಸರೇ ವಿಚಿತ್ರ ಸೆಳೆಯುವ ಹಾಗಿದೆ. ಮೊದಲ ಕವನ 'ದುಃಖ ದಾಖಲಿಸುವವನೇ ಇದನ್ನು ಬರೆದಿಟ್ಟುಕೋ' ದಲ್ಲಿನ
"ಇನ್ನು ತೀರ್ಪು ನಿನ್ನಿಚ್ಛೆಯಂತೇ ಬರೆದುಕೊಂಡಲ್ಲಿ
ಪ್ರತಿಸಲ ನಾನೇಕೆ ಅಚ್ಚರಿಪಡಲಿ"
ಎಂಬ ಸಾಲು ಪ್ರಶ್ನೆಯಷ್ಟೇ ಅಲ್ಲ ಉತ್ತರವೂ ಕೂಡ ಆಗಿ ಪಕ್ಷಪಾತದ ತೀರ್ಪೂ ನಿರೀಕ್ಷಿತವಾಗುವ ದುರಂತವನ್ನು ರಾಚುವಂತಿದೆ.
![]() |
| ಚಿತ್ರ ಕೃಪೆ: http://naditeera.blogspot.in |
'ಮಂಡಿಯೂರಿದ್ದಾಳೆ ಕಿಸಾಗೋತಮಿ ಜೀವಕ್ಕಲ್ಲ' ಕವನದಲ್ಲಿ ಬರುವ ಸಾಲು "ಮಂಡಿಯೂರಿ ಕಿಸಾಗೋತಮಿಯಾಗುತ್ತಾಳೆ". 'ಆಗುತ್ತಾಳೆ' ಅಂದರೆ ಅವಳು ಕಿಸಾಗೋತಮಿಯೇ ಅಲ್ಲ. ಇಲ್ಲಿ ಕಿಸಾಗೋತಮಿ ಕೇವಲ ಗತಕಾಲದ ಕತೆ ಅಥವಾ ಪ್ರತಿಮೆಯಷ್ಟೇ ಅಲ್ಲದೇ ಒಂದು 'ಸಂದರ್ಭ'ವಾಗಿ ಯಾರು ಬೇಕಾದರೂ ಹಾಯಬೇಕಾಗಿಬರಬಹುದಾದ 'ಮನಸ್ಥಿತಿ'ಯಾಗಿ ಹೊಳೆಯುವ ರೀತಿ ತುಂಬ ಇಷ್ಟವಾಯ್ತು. ಅಲ್ಲದೇ ಕಿಸಾಗೋತಮಿ ಹೆಸರಿನ ಆ ಸಿಚುವೇಶನ್ನಿಗೆ ಬುದ್ಧನ ಎಲ್ಲ ಬೋಧೆಗಳಿಗೆ ರಪ್ಪನೇ ಎದುರಾಗಿ 'ಗೋರಿಗಳ ಮೇಲೆ ಕಟ್ಟಿದ ಊರ ತೊರೆದು' ಮತ್ತೆ ಆಸೆಯ ಮೂಲವ ನೆನೆದು' ಹೊರಡುವಂತೇ ಮಾಡುವ ಶಕ್ತಿಯಿರುವುದು ಬೆರಗಿಗೆ ಕಾರಣವಾಯ್ತು.
'ಹಾಗೇ ಉಸಿರಾಟದಲ್ಲೇಕೋ ಸಂದೇಹವೀಗ
ಹುಡುಗನಿಗೆ ಅನುಮಾನ
ತೋಪಿನಲಿ ತೂರಿಬಿಟ್ಟ ಮುತ್ತು
ಆಕೆ ತನಗೆ ತಲುಪಿಲ್ಲ ಎಂದಾಗ!' (ಸ್ಮಶಾನಗಳು ಮುಚ್ಚಲಿವೆ ಮನುಷ್ಯರಿದ್ದರೆ ಕಳುಹಿಸಿ)
ಇಲ್ಲಿ ಕ್ರೌರ್ಯ ಮತ್ತು ಹೇಗೆ ಒಟ್ಟೊಟ್ಟಿಗೇ ಉಕ್ಕುತ್ತವೆ ನೋಡಿ. ಒಂಥರಾ ಚೆಂದದ ಬೆಕ್ಕು ಒಮ್ಮೆಲೇ ಪಂಜನ್ನು ಹೊರಚಾಚಿ ಪರಚಿದಾಗ ಅದು ಬೆರೆಯೇ ಆಗಿ ಕಾಣತೊಡಗುತ್ತಲ್ಲ ಹಂಗೆ. "ತೋಪಿನಲ್ಲಿ ತೂರಿಬಿಟ್ಟ ಮುತ್ತು" ಇಲ್ಲಿ ತೂರಿಬಿಟ್ಟ ಮುತ್ತು ಎಷ್ಟು ನವಿರಾದ ಕಲ್ಪನೆಯನ್ನು ಮನದಲ್ಲಿ ಮೂಡಿಸುತ್ತದೆಯೋ, ಅದರ ಹಿಂದಿನ ಶಬ್ದ "ತೋಪಿನಲ್ಲಿ" ಅಷ್ಟೇ ತೀವ್ರವಾಗಿ ನಮ್ಮನ್ನು ಬೆಚ್ಚಿಬೀಳಿಸುತ್ತದೆ. ಮತ್ತು ಈ ದಾರುಣತೆ ನಿಮ್ಮ ಕಾವ್ಯದಲ್ಲಿ ಎಷ್ಟು ಸಹಜವಾಗಿ ಬರುತ್ತದೆ ಎಂಬುದು ಅಚ್ಚರಿ ಹುಟ್ಟಿಸಿತು.
'ಹಸಿವೆಗೆ ಉಪಮೆಗಳ
ಹುಡುಕಿ ಹಸಿದುಕೊಂಡಿರಿ ನೀವು
ಬಿಡಿ ಅದ್ಹೇಗೆ ಅರ್ಥವಾದೇವು
ಅರ್ಧರಾತ್ರಿಯ ಅನಾಥ ಪ್ರತಿಮೆಗಳು ನಾವು!" (ಮರ್ಕ್ಯೂರಿ ಲೈಟಿನಡಿಗೆ)
ನಿಮ್ಮ ಕಾವ್ಯಕ್ಕೆ ಅವರ ತೀರ್ಪಿನ ಫಲಿತಾಂಶ ಮೊದಲೇ ಅರಿತೂ, ಸದಾ ಹಾಲುಗಲ್ಲದ ಮೇಲೆ ನಳಿಕೆ ಹಿಡಿಯುವ ಕ್ರೌರ್ಯದ ಎದುರೂ ನಿರ್ಲಿಪ್ತವಾಗಿರಬಲ್ಲ ಮತ್ತು ಅಷ್ಟೇ ತಣ್ಣಗೇ "ಕಾಯಿದೆಗಳ ಹೊರಡಿಸಿ ನಿಷೇಧಿಸಲಾಗದು ನಿಟ್ಟುಸಿರು" ಎಂದು ಧೈರ್ಯವಾಗಿ ಹೇಳುವ ತಣ್ಣನೆಯ ಆದರೆ ಗಟ್ಟಿ ದನಿಯಿದೆ ಅನ್ನಿಸಿತು.
ಇವಿಷ್ಟೇ ಅಲ್ಲ ಸಂಕಲನದ ಇನ್ನು ಬಹಳ ಕವಿತೆಗಳು ತುಂಬಾ ಇಷ್ಟವಾದವು. ಈ ಸಂಕಲನ ಓದಿದ ಮೇಲೆ ನಿಮ್ಮ ಮುಂದಿನ ಬರವಣಿಗೆಯ ಮೇಲೆ ವಿಶ್ವಾಸಪೂರ್ಣ ಕುತೂಹಲ ಹುಟ್ಟಿದೆ. ಇನ್ನೂ ಒಳ್ಳೆಯ ಕವಿತೆಗಳನ್ನು ಬರೆಯಿರಿ.. ಶುಭವಾಗಲಿ.
ಪ್ರೀತಿಯಿಂದ,
ಪದ್ಮನಾಭ ಭಟ್, ಶೇವ್ಕಾರ್.
-----------------------------------------------------------------------------------------------------------
(ಇದು 'ರೂಪಾಂತರ'ದ ಅತಿಥಿ ಬರಹ. ಪದ್ಮನಾಭ ಭಟ್, ನಮ್ಮ ನಡುವಿನ ಉತ್ಸಾಹಿ ಯುವ ಬರಹಗಾರ, ಸೂಕ್ಷ್ಮ ಸಂವೇದನಾಶೀಲ ಓದುಗ, ಭಾವಜೀವಿ. ಪ್ರಸ್ತುತ ಪತ್ರಿಕೋದ್ಯಮ ವಿದ್ಯಾರ್ಥಿ)
08 July, 2012
10 June, 2012
26 May, 2012
19 May, 2012
14 May, 2012
05 May, 2012
29 April, 2012
23 April, 2012
14 April, 2012
29 June, 2011
ಬಸ್ಸ್ಟ್ಯಾಂಡು
ಅದು ಒಂಥರಾ ಜಾಗ ಆ ಜಾಗ ಕಣ್ಣು ಬಿಡುವುದು ಈಗಷ್ಟೇ ಅಲ್ಲೆಲ್ಲೋ ಮೂಲೆಯಿಂದ ಎದ್ದುಕುಳಿತ ಹಮಾಲಿಗಳು, ರಾತ್ರಿ ಪಾಳಿಯ ಕಂಡಕ್ಟರುಗಳು ತಮ್ಮ ತಮ್ಮ ಟ್ರಾವೆಲಿಂಗ್ ಮನೆಯ ದಿನಚರಿಗಳನ್ನು ಹವಾಯಿ ಚಪ್ಪಲಿ,ಬ್ರಶ್ಶು,ಪೇಸ್ಟು ಹುಡುಕುವುದರೊಂದಿಗೆ ಶುರುಮಾಡುತ್ತಾರಲ್ಲಾ ಆಗ.ಅದರ ಹೆಸರು ಬಸ್ಸ್ಟ್ಯಾಂಡು.ಅಜ್ಜನ ಮನೆಗೆ ಹೋಗಲು ಬೆಳಬೆಳಿಗ್ಗೆಯೇ ಅಮ್ಮನೊಟ್ಟಿಗೆ ಬಂದ ಪುಟ್ಟನ ಕೇಕೆಯಿಂದ, ಅವಸರವಾಗಿ ಬಸ್ಸಿಗೆ ಓಡಿಬಂದ ಕಾಲೇಜು ಹುಡುಗಿಯ ಟಿಫಿನ್ ಬಾಕ್ಸು ಓಪನ್ ಆಗುವ ಘಮದಿಂದ,ಬಗೆಬಗೆಯ ಬಣ್ಣದ ಚಪ್ಪಲಿಗಳ ಟಪಟಪದಿಂದ,ಅಲ್ಲೇ ಚಿಲಿಪಿಲಿಗುಟ್ಟಾಗಲೇ ಇರುವು ಅರಿವಾಗುವ ಪುಟ್ಟ ಗುಬ್ಬಚ್ಚಿ,ಇಣಚಿಗಳಿಂದ ಆ ಬಸ್ಸ್ಟ್ಯಾಂಡಿಗೆ ಅಸ್ತಿತ್ವ. ಅಲ್ಲಿ ಯಾರು ಬರುವುದಿಲ್ಲ ಎನ್ನುವ ಹಾಗೆಯೇ ಇಲ್ಲ, ಅಜ್ಜ ಅಜ್ಜಿಯಿಂದ ಹಿಡಿದು ಹಾಲುಗಲ್ಲದ ಹಸುಳೆಯವರೆಗೆ ಅತಿಥಿಗಳು,ಸ್ವಾಮಿ ನಾರಾಯಣನಿಂದ ಹಿಡಿದು ಹರುಕು ಅಂಗಿಯ ಬೇಡುವ ಮುದುಕನವರೆಗೆ ಎಲ್ಲರಿಗೂ ಜಾಗ ಉಂಟು.ಅದನ್ನು ನಾವೆಲ್ಲ ಬಸ್ಸ್ಟ್ಯಾಂಡೆಂದು ಕರೆದರೆ ಬೀದಿಬದಿಯ ಕೂಲಿಯವನಿಗೆ,ಬೆಳಗಾಗೆದ್ದು ಪೇಪರ್ ಹಂಚುವವನಿಗೆಲ್ಲ ರಾತ್ರಿ ಮಲಗಲು ಅದೇ ಮನೆ .ಆಂಥ ಬಸ್ಸ್ಟ್ಯಾಂಡುಗಳಲ್ಲಿ ಚಾದರ ಹಾಸಿ ಸುತ್ತಿ ಮಲಗಿ ಕನಸು ಕಾಣಬಹುದು ಎಂಬುದು ಕೆಟ್ಟಕನಸಿಗಿಂತಾ ಸುಂದರ..! ದಿನ ಬೆಳಗಾದರೆ ಸಾವಿರ ಹೊಸಮುಖಗಳು ಹುಡುಕಿಕೊಂಡು ಬರುವ ಬಸ್ಸ್ಟ್ಯಾಂಡೇ ಹಾಗೆ. ಗಿಜಿ ಗಿಜಿ ಕೇಳಿ ಅದಕ್ಕೆ ಬೇಜರಾಗಿಲ್ಲವೇ? ಆಗಿರಬಹುದು ಇಲ್ಲ ಅದೇ ಇಷ್ಟವಾಗಿರಬಹುದು. ಅಲ್ಲಿ ಬರುವ ಜನರದೇ ಒಂದು ವೆರಾಯಿಟಿ,ಪಟ್ಟೆ ಪಟ್ಟೇ ಅಂಗಿಯ ಶಿಸ್ತು ಬೂಟಿನ ಶಾಲೆ ಹುಡುಗರು,ಹೊಸಾ ಹೆಂಡತಿ ಕೈ ಅಡುಗೆಯ ಟಿಫಿನ್ ಬಾಕ್ಸನ್ನು ನಿಧಿಯೆಂದು ಕೈಲಿ ಹಿಡಿದಿರುವ ಯುವಕನಿಂದ, ಎರಡು ರುಪಾಯಿ ಸೇಂಗಾ ಬಿಚ್ಚಿಕೊಂಡು ತಿನ್ನುವ ಹುಡುಗರಿಂದ, ಕ್ಯಾಲೆಂಡರ್ ಮಾರಿ ಎರಡು ಮಕ್ಕಳನ್ನು ಸಾಕುವವನಿಗೆ ಅದೇ ಜಾಗ ಆಗಬೇಕು.ಈ ಬಸ್ಸ್ಟ್ಯಾಂಡಿನ ಸುತ್ತ ಹೊಸತೇ ಊರುಗಳು ಹುಟ್ಟಿಕೊಳ್ಳುತ್ತವೆ, ಬೆಂಗಳೂರೋ ಮಂಗಳೂರೋ ಬಸ್ಸ್ಟ್ಯಾಂಡಿನ ಸುತ್ತ ಬೆಳೆದ ಊರುಗಳೇ. ಅಲ್ಲೇ ಸುತ್ತ ದೋಸೆ ಅಂಗಡಿ,ಮಂಡಕ್ಕಿ ಶಾಪು,ಆಮ್ಲೆಟ್ಟಿನ ಟಪರಿ ಹೀಗೆ.ಅಗ್ಗದ ಸಾಮಾನುಗಳೇನಾದರೂ ಬೇಕಾದರೆ ಇತ್ತ ಬನ್ನಿ ಎನ್ನುವ ಹಾಗೆ.
ಎಲ್ಲ ಊರುಗಳನ್ನು ನೋಡಿ ಬರುವ ಬಸ್ಸು ಈ ಬಸ್ಸ್ಟ್ಯಾಂಡಿನಲ್ಲಿ ತಾಸುಗಟ್ಟಲೇ ನಿಂತು ಸುತ್ತಿದೂರಿನ ಕಥೆ ಹೇಳುತ್ತದೆ.ಅಲ್ಲಿ ಹಂಗೆ ಇಲ್ಲಿ ಹಿಂಗೆ,ಅಲ್ಲಿ ಗದ್ದೆ ಎಲ್ಲಾ ಕುಯಿಲು ಮುಗಿಸಿ ಭತ್ತದ ವಜ್ಜೆಗಳನ್ನು ಹರವಿಕೊಂಡು ನಿಂತಿದೆ,ಚಿಲಿಪಿಲಿ ಗುಬ್ಬಿಗಳನ್ನು ಮಾತನಾಡಿಸಿದೆ,ಆ ಊರಲ್ಲಿ ಮನೆಕಟ್ಟುತ್ತಿದ್ದಾರೆ ಅಂದಿದ್ದೆನಲ್ಲ, ಈಗ ಅಲ್ಲಿ ಮನೆ ಎಲ್ಲ ಎದ್ದು ನಿಂತು ಆ ಮನೆಯ ಸಣ್ಣ ಪಾಪುವೊಂದು ದಿನವೂ ಕೈಬೀಸದಿದ್ದರೆ ನನಗೂ ಸಮಾಧಾನವಿಲ್ಲ ಎನ್ನುವಂತೆ ಆಗಿದೆ ಗೊತ್ತಾ.., ಇಂದು ಮುಂಜಾನೆ ತಿರುವಿನ ಎದುರು ಜಿಂಕೆ ದಂಡು,ಈ ಪ್ಯಾಟೆಯಲ್ಲಿ ತಿರುಗುವುದು ಅಂದರೆ ಯಾರಿಗೂ ಬೇಡದ ಗೋಳು ಎಲ್ಲರಿಗೂ ನನ್ನ ರೋಡೇ ಆಗಬೇಕು ಹಾಗೆ, ಹೀಗೆ ಏನೇನೋ ಕತೆ.ಕೇಳಿನೋಡಿ ಈ ಬಸ್ಸ್ಟ್ಯಾಂಡಿನ ಬಳಿಯೂ ಅಂತದ್ದೇ ನೂರು ಕಥೆಗಳಿವೆ.ದಿನವೂ ಸೇರುವ ಪ್ರೇಮಿಗಳದು ಒಂದಾದರೆ, ಶಾಲೆ ಮಕ್ಕಳ ಶಾಲೆಯ ದಿನಚರಿಗಳ ಕತೆ ಇನ್ನೊಂದು, ಕೆಲ ಊರುಗಳಲ್ಲಿ ಬಸ್ಸಿನಿಂದ ಬಸ್ಸಿಗೆ ಮೂರು ತಾಸುಗಳ ಅಂತರವಿರುತ್ತದೆ,ನಡುವಿನ ವೇಳೆಯೇನಾದರೂ ಬಿಡುವ ಶಾಲೆಯಾದರೆ ಮಕ್ಕಳ ಹೋಮ್ವರ್ಕ್ ಅಲ್ಲೇ ನಡೆಯುವುದು.ನಾವೆಲ್ಲ ಹೈಸ್ಕೂಲಿಗೆ ಹೋಗುವಾಗ ಸಂಜೆ ತಾಸುಗಟ್ಟಲೆ ಬಸ್ಸಿಗೆ ಕಾಯಬೇಕಾಗುತ್ತಿತ್ತು, ಹುಡುಗಿಯರೆಲ್ಲ ಕಷ್ಟಪಟ್ಟು ಆಗಲೇ ಹೋಮ್ವರ್ಕ್ ಮಾಡುತ್ತಿದ್ದರೆ ಹುಡುಗರು ನಮ್ಮದನ್ನೂ ಅವರಿಗೇ ಬರೆಯಲು ಕೊಟ್ಟು ಕ್ರಿಕೆಟ್ ಆಡುವುದಿತ್ತು. ಬಸ್ಸ್ಟಾಂಡಿಗೆ ಎಲ್ಲ ಊರುಗಳನ್ನು ಒಂದೇ ಸೇರಿಸುವ ಉಮೇದಿ.ಬಸ್ಸ್ಟ್ಯಾಂಡಿನಲ್ಲಿ ಕೂತು ಹರಟದೇ ಹೋದ ಪ್ರೇಮಿಗಳು ನಿರ್ಭಾಗ್ಯರ ಲಿಸ್ಟಿಗೆ ಸೇರುತ್ತಾರೆ.ನಮ್ಮ ಊರಿನಲ್ಲೊಬ್ಬ ಹಮಾಲಿ ಕೆಲಸ ಮಾಡಿಕೊಂದಿದ್ದವನಿದ್ದ ಅವನದು ಯಾವ ಜಾತಿಯೊ ಪಾತಿಯೋ ಆದರೆ ಬಸ್ಸ್ಟ್ಯಾಂಡಿನಲ್ಲಿ ಯಾರು ಏನು ಲಗೇಜು ಹಿಡಿದು ನಿಂತಿದ್ದರೂ ಎದುರಿಗೆ ಹಾಜರಾಗುತ್ತಿದ್ದ ಅವನ ಹೆಸರು ಸರ್ನೇಮ್ ಎಲ್ಲ ಬಿಡಿ ಎಲ್ಲರೂ ಕರೆಯುವುದು ಬಸ್ಸ್ಟ್ಯಾಂಡ್ ಪಾಂಡು ಎಂದೇ, ಹಾಗೆ ಎಷ್ಟೋ ಜನರು ಹೊತ್ತಿನ ಅನ್ನ,ಐಡೆಂಟಿಟಿ ಕಂಡಿದ್ದು ಇದೇ ಬಸ್ಸ್ಟ್ಯಾಂಡ್ನಲ್ಲಿ.
ಎಲ್ಲ ಊರುಗಳನ್ನು ನೋಡಿ ಬರುವ ಬಸ್ಸು ಈ ಬಸ್ಸ್ಟ್ಯಾಂಡಿನಲ್ಲಿ ತಾಸುಗಟ್ಟಲೇ ನಿಂತು ಸುತ್ತಿದೂರಿನ ಕಥೆ ಹೇಳುತ್ತದೆ.ಅಲ್ಲಿ ಹಂಗೆ ಇಲ್ಲಿ ಹಿಂಗೆ,ಅಲ್ಲಿ ಗದ್ದೆ ಎಲ್ಲಾ ಕುಯಿಲು ಮುಗಿಸಿ ಭತ್ತದ ವಜ್ಜೆಗಳನ್ನು ಹರವಿಕೊಂಡು ನಿಂತಿದೆ,ಚಿಲಿಪಿಲಿ ಗುಬ್ಬಿಗಳನ್ನು ಮಾತನಾಡಿಸಿದೆ,ಆ ಊರಲ್ಲಿ ಮನೆಕಟ್ಟುತ್ತಿದ್ದಾರೆ ಅಂದಿದ್ದೆನಲ್ಲ, ಈಗ ಅಲ್ಲಿ ಮನೆ ಎಲ್ಲ ಎದ್ದು ನಿಂತು ಆ ಮನೆಯ ಸಣ್ಣ ಪಾಪುವೊಂದು ದಿನವೂ ಕೈಬೀಸದಿದ್ದರೆ ನನಗೂ ಸಮಾಧಾನವಿಲ್ಲ ಎನ್ನುವಂತೆ ಆಗಿದೆ ಗೊತ್ತಾ.., ಇಂದು ಮುಂಜಾನೆ ತಿರುವಿನ ಎದುರು ಜಿಂಕೆ ದಂಡು,ಈ ಪ್ಯಾಟೆಯಲ್ಲಿ ತಿರುಗುವುದು ಅಂದರೆ ಯಾರಿಗೂ ಬೇಡದ ಗೋಳು ಎಲ್ಲರಿಗೂ ನನ್ನ ರೋಡೇ ಆಗಬೇಕು ಹಾಗೆ, ಹೀಗೆ ಏನೇನೋ ಕತೆ.ಕೇಳಿನೋಡಿ ಈ ಬಸ್ಸ್ಟ್ಯಾಂಡಿನ ಬಳಿಯೂ ಅಂತದ್ದೇ ನೂರು ಕಥೆಗಳಿವೆ.ದಿನವೂ ಸೇರುವ ಪ್ರೇಮಿಗಳದು ಒಂದಾದರೆ, ಶಾಲೆ ಮಕ್ಕಳ ಶಾಲೆಯ ದಿನಚರಿಗಳ ಕತೆ ಇನ್ನೊಂದು, ಕೆಲ ಊರುಗಳಲ್ಲಿ ಬಸ್ಸಿನಿಂದ ಬಸ್ಸಿಗೆ ಮೂರು ತಾಸುಗಳ ಅಂತರವಿರುತ್ತದೆ,ನಡುವಿನ ವೇಳೆಯೇನಾದರೂ ಬಿಡುವ ಶಾಲೆಯಾದರೆ ಮಕ್ಕಳ ಹೋಮ್ವರ್ಕ್ ಅಲ್ಲೇ ನಡೆಯುವುದು.ನಾವೆಲ್ಲ ಹೈಸ್ಕೂಲಿಗೆ ಹೋಗುವಾಗ ಸಂಜೆ ತಾಸುಗಟ್ಟಲೆ ಬಸ್ಸಿಗೆ ಕಾಯಬೇಕಾಗುತ್ತಿತ್ತು, ಹುಡುಗಿಯರೆಲ್ಲ ಕಷ್ಟಪಟ್ಟು ಆಗಲೇ ಹೋಮ್ವರ್ಕ್ ಮಾಡುತ್ತಿದ್ದರೆ ಹುಡುಗರು ನಮ್ಮದನ್ನೂ ಅವರಿಗೇ ಬರೆಯಲು ಕೊಟ್ಟು ಕ್ರಿಕೆಟ್ ಆಡುವುದಿತ್ತು. ಬಸ್ಸ್ಟಾಂಡಿಗೆ ಎಲ್ಲ ಊರುಗಳನ್ನು ಒಂದೇ ಸೇರಿಸುವ ಉಮೇದಿ.ಬಸ್ಸ್ಟ್ಯಾಂಡಿನಲ್ಲಿ ಕೂತು ಹರಟದೇ ಹೋದ ಪ್ರೇಮಿಗಳು ನಿರ್ಭಾಗ್ಯರ ಲಿಸ್ಟಿಗೆ ಸೇರುತ್ತಾರೆ.ನಮ್ಮ ಊರಿನಲ್ಲೊಬ್ಬ ಹಮಾಲಿ ಕೆಲಸ ಮಾಡಿಕೊಂದಿದ್ದವನಿದ್ದ ಅವನದು ಯಾವ ಜಾತಿಯೊ ಪಾತಿಯೋ ಆದರೆ ಬಸ್ಸ್ಟ್ಯಾಂಡಿನಲ್ಲಿ ಯಾರು ಏನು ಲಗೇಜು ಹಿಡಿದು ನಿಂತಿದ್ದರೂ ಎದುರಿಗೆ ಹಾಜರಾಗುತ್ತಿದ್ದ ಅವನ ಹೆಸರು ಸರ್ನೇಮ್ ಎಲ್ಲ ಬಿಡಿ ಎಲ್ಲರೂ ಕರೆಯುವುದು ಬಸ್ಸ್ಟ್ಯಾಂಡ್ ಪಾಂಡು ಎಂದೇ, ಹಾಗೆ ಎಷ್ಟೋ ಜನರು ಹೊತ್ತಿನ ಅನ್ನ,ಐಡೆಂಟಿಟಿ ಕಂಡಿದ್ದು ಇದೇ ಬಸ್ಸ್ಟ್ಯಾಂಡ್ನಲ್ಲಿ.
ನಮ್ಮ ಊರುಗಳಲ್ಲಿ ಬಸ್ಸ್ಟ್ಯಾಂಡ್ಗಳು, ಬಸ್ಸ್ಟಾಪ್ಗಳಿಗೆ ಬೇರೆಯದೇ ರೂಪ, ದೊಡ್ಡ ಬಸ್ಸುಗಳನ್ನು ತಿರುಗಿಸಿ ತಿರುಗಿಸಿ ಆದ ಬಯಲನ್ನೇ ಬಸ್ಸ್ಟ್ಯಾಂಡೆಂದು ಕರೆಯುವುದು,ಆ ಬಸ್ಸುಗಳು ಹೋಗುವಾಗ ಟಾರುರಸ್ತೆಗೆ ನೂರು ಕಾಲುದಾರಿ,ಅವುಗಳ ಪಕ್ಕ ಒಂದು ಮರದ ಕೆಳಗೆ ಜಾಗ ಸ್ವಚ್ಚ ಮಾಡಿ ಗೂಟ ಹುಗಿದೋ, ಒಣಗಿದೆಲೆಯ ಕೊಂಬೆಯನ್ನು ನೇತುಹಾಕಿಯೋ ಗುರುತು ಮಾಡಿಟ್ಟು ನಾಲ್ಕು ಜನ ನಿಂತರೆ ಅದೇ ಬಸ್ಸ್ಟಾಪು. ಎಲ್ಲೆಲ್ಲೋ ಒಂದೆರಡು ಕಡೆ ವ್ಯವಸ್ಥಿತ ಬಸ್ಸ್ಟ್ಯಾಂಡುಗಳು ಸ್ಟಾಪುಗಳು ಇವೆ. ಇಂತ ಬಸ್ಸ್ಟ್ಯಾಂಡುಗಳ ವಯಕ್ತಿಕ ಹಿನ್ನೆಲೆಗಳ ಮೇಲೆ,ಅಲ್ಲಿ ನಿಲ್ಲುವ ಜನರ ಮೇಲೆ,ಪ್ರಣಯ ಕಥೆಗಳ ಮೇಲೆ ದಂತಕತೆಗಳ ಮೇಲೆ ಅವುಗಳ ನಟೋರಿಸಿಟಿಯೋ,ಪ್ರಸಿಧ್ಧಿಯೋ,ಅಡ್ಡನಾಮಗಳೋ ಇರುತ್ತವೆ. ಜಗತ್ತಿನ ಪರಮ ಸೀಕ್ರೇಟುಗಳು ಲೀಕಾಗುವ ಜಾಗವೂ ಅದೇ.
ಅಲ್ಲಿ ಹಳೇ ಹಾಡಿನ ಗುಂಗು ಮತ್ತು ಹರೆಯದ ಹುಡುಗಿಯರ ದಂಡು. ಆ ಮೂಲೆಯ ಕಂಬದ ಬಳಿ ಹೊಸಾ ಪ್ರೇಮಿಗಳ ಯುಗಳ ಗೀತ. ಮನೆ ಸಾಮಾನು,ಮಗಳಿಗೆ ಪೆಟ್ಟಿಕೋಟು, ಅಂಗಿ, ಹೊಸಾಪಾತ್ರೆ ತಂದುಕುಳಿತ ಗಂಡಹೆಂಡತಿಗೆ ಬಸ್ಸು ಇನ್ನೆರಡು ಗಳಿಗೆ ತಡೆದು ಬರಲಿ ಎಂಬ ಆಸೆ.ಸೂರ್ಯ ಆಕಡೆಗಿಂದ ಹುಟ್ಟಿ ಈಕಡೆ ಮುಳುಗುವ ಒಳಗೆ ಎಷ್ಟು ಜನರ ಉಸಿರುಗಳ ಉಸ್ತುವಾರಿ ವಹಿಸಿಕೊಳ್ಳುತ್ತದೆ ಈ ಬಸ್ಸ್ಟ್ಯಾಂಡು.ಮುದ್ದು ಕಂದನನ್ನು ಎತ್ತಿಕೊಂಡು ಬಸ್ಸು ಹಿಡಿಯಲು ಓಡುತ್ತಿದ್ದ ತಾಯಿಯ ಪ್ರೀತಿ ಈ ಬಸ್ಸ್ಟ್ಯಾಂಡಿನಲ್ಲೂ ಹರಡಿದೆ.ಬಸ್ಸಿಗಾಗಿ ಕಾಯುತ್ತ ನಿಂತ ಎಲ್ಲ ಜನಗಳ ಸ್ನಿಗ್ಧ ಆಸೆ ಅಲ್ಲಿ ನೆಲೆಗೊಳ್ಳುತ್ತವೆ.ಕತ್ತಲು ರಾತ್ರಿಯಾದರೆ ಮತ್ತೆ ಹಾಸಿಗೆಯಲ್ಲದ ಹಾಸಿಗೆ ಬಿಚ್ಚಿಕೊಂಡಾಗ ಬಸ್ಸ್ಟ್ಯಾಂಡಿನಲ್ಲಿ ಆ ರಾತ್ರಿಯ ಕೊನೇ ಬಸ್ಸನ್ನು ಆಗಷ್ಟೇ ಬೀಳ್ಕೊಟ್ಟು ಬಂದು ನಿಂತ ಬಸ್ಸುಗಳು ಪಿಸುದನಿಯಲ್ಲಿ ಕಥೆ ಹೇಳುತ್ತ ಅಲ್ಲೇ ಒರಗಿದ ನೀಲಿ ಬಸ್ಸಿನ ಡ್ರೈವರನನ್ನು ಮಲಗಿಸುತ್ತವೆ.ಹಳ್ಳಿಯ ಬಸ್ಸ್ಟ್ಯಾಂಡುಗಳಲ್ಲಿ ದಾರಿತಪ್ಪಿದ ಎಮ್ಮೆಗಳು ಮೆಲುಕು ಹಾಕುತ್ತ ಸಂಗೀತಾ ಐ ಲವ್ವ್ ಯೂ ಎಂಬ ಭಗ್ನ ಪ್ರೇಮಿಯ ಡೊಂಕು ಬರಹವನ್ನು ಓದುತ್ತಾ ಮಲಗಿರುತ್ತವೆ.
22 May, 2011
10 May, 2011
ಆಡುಮಳೆಯ ಜೊತೆಗೆ..
ಮೇ ತಿಂಗಳ ಸಂಜೆ ಮಳೆಯೆಂದರೇ ಹಾಗೆ,ಇಷ್ಟದ ಗೆಳತಿಯ ಹಾಗೆ.ಕಾಯಿಸುತ್ತದೆ,ಕಾಡಿಸುತ್ತದೆ,ಪ್ರೀತಿ ತೋರಿಸುತ್ತದೆ.ಬೇಕು ಬೇಕು ಎಂದೆನಿಸುತ್ತಿರುವ ಹಾಗೇ ನಾಳೆ ಬರುತ್ತೇನೆ ಎನ್ನುತ್ತಾ ಸದ್ದಿಲ್ಲದೇ ಹೊರಟುನಿಂತುಬಿಡುತ್ತದೆ.ಅದು ಜುಮುರು ಮಳೆ,ಅದು ಹನಿ ಮಳೆ,ಅದು ಕಿರಿಕಿರಿ ಮಳೆ,ಅದು ಪಿರಿಪಿರಿ ಮಳೆ, ಅದು ಮಗು ಮಳೆ, ಅದು ಗದ್ದಲದ ನಗು ನಗುತ್ತಾ ನಮ್ಮನ್ನೂ ನಗಿಸುವ ಪುಟ್ಟ ಹುಡುಗರಂಥ ಮಳೆ, ಬಯ್ದುಬಿಡಬೇಕೆಂದುಕೊಂಡರೂ ಮುದ್ದುಮಾಡಿಸಿಕೊಳ್ಳುತ್ತದೆ.ಈ ಮಳೆಯಲ್ಲಿ ನೆನಪಿನ ರಾಶಿಯಿದೆ.ಸುಸ್ತುಬಡಿದು ಪುದುಪುದು ಮನೆ ಸೇರಲು ಹೊರಟವರನ್ನು ನಿಲ್ಲಿಸಿ ತಲೆ ನೇವರಿಸುತ್ತದೆ,ಆರಾಗುವುದರೊಳಗೆ ಮನೆಸೇರಲೆಂದು ಪಾತ್ರೆ, ನೀರು,ಅಡುಗೆ ಸೀರಿಯಲ್ಲು ಎನ್ನುತ್ತ ಹೊರಟ ವ್ಯಾನಿಟಿ ಬ್ಯಾಗಿನ ಹೆಂಗಸರನ್ನೆಲ್ಲ ತಡೆದು ನಿಲ್ಲಿಸಿ ಬಯ್ಯಿಸಿಕೊಳ್ಳುತ್ತದೆ,ಇಲ್ಲ ಇಲ್ಲ ಎನ್ನುತ್ತಲೇ ಬೀಸಿ ಬರುವ ದಪ್ಪದಪ್ಪ ಹನಿಗಳು ತಾರಸಿಯನ್ನು ಟಪಟಪಿಸುತ್ತವೆ.ಈ ಮಳೆಗೆ ಕಿಟಕಿ ಬಾಲ್ಕನಿಗಳೆಂದರೆ ಬಲು ಅಕ್ಕರೆ,ಕಿಟಕಿಯೊಳಗೆಲ್ಲ ಇಣುಕದಿದ್ದರೆ ಸಮಾಧಾನವಿಲ್ಲ. ಈ ಮಳೆಗೆ ಕಿಟಕಿಯೇ ಇಲ್ಲದ ಕೋಟೆಯೊಳಗೆ ಕಂಪ್ಯೂಟರಿನ ವಿಂಡೋದಲ್ಲಿ ತಲೆಹುದುಗಿಸಿಕೊಂಡಿದ್ದವರೆಲ್ಲರನ್ನು ಬಾಲ್ಕನಿಗೆ ಕರೆದು ನಿಲ್ಲಿಸುವ ತಾಕತ್ತಿದೆ.
ಈ ಮಳೆ ಹದಿಹರೆಯದ ಮಳೆ,ಸುಮ್ಮನೆ ಸುರಿವ ಮಳೆಯಲ್ಲ, ತಾರಸಿಯಯ ಮೇಲೆ ಬೀಳುವುದಕ್ಕಿಂತ ಗೋಡೆಗೆ ಮುತ್ತಿಕ್ಕುವುದೇ ಪ್ರೀತಿ,ಬಾಲ್ಕನಿಯಗುಂಟ ಮುದ್ದಾಗಿ ಹನಿಸುತ್ತದೆ,ಹೊರಗಿಟ್ಟ ಚಪ್ಪಲಿಗಳನ್ನು ತೋಯಿಸುವುದಿಲ್ಲ,ನಿಂತ ಸೈಕಲ್ಲನ್ನು ತೋಯಿಸದೇ ಬಿಡುವುದಿಲ್ಲ,ಮನೆಸೇರಲು ಬಸ್ಸಿನಲ್ಲಿ ತುಂಬಿಕೊಂಡು ಬೆವರು ಸುರಿಸುವ ಜನರನ್ನು ಗಾಜಿನ ಹೋರಗಿಂದೇ ತಳಕ್-ತಳಕ್ ಎಂದು ತಾಕುತ್ತ ಎದೆಯ ಉಸಿರಿಗೆ ತಂಪನ್ನು ಸಂವಹನಿಸುತ್ತದೆ.ಆಫೀಸಿನಲ್ಲಿ ಬೈಸಿಕೊಂಡು ಜೀವನ ಬೇಸರವಾದ ಯುವಕನ ಅಂಗಿಯನ್ನು ನವಿರಾಗಿ ಒದ್ದೆಗೊಳಿಸುತ್ತದೆ.ಮೆಸ್ಸೇಜಿನಲ್ಲಿ ಹುದುಗಿ ನಗುತ್ತಿರುವ ಹುಡುಗಿಯ ಕೆನ್ನೆಯ ಮೇಲೆ ಹನಿಸುತ್ತದೆ,ಕಾಲೇಜು ಮುಗಿದು ಆಡಲು ನಿಂತ ಹುಡುಗರು ಇನ್ನೇನು ಗೆಲ್ಲಬೇಕೆಂಬ ಕ್ರಿಕೆಟ್ ಮ್ಯಾಚನ್ನು ಅಲ್ಲಿಗೇ ನಿಲ್ಲಿಸಿ ಮಜಾನೋಡುತ್ತದೆ.
ಮನೆಗೆ ಹಿಂತಿರುಗುವ ಪಾರಿವಾಳಗಳ ಬೂದುರೆಕ್ಕೆಗಳ ಮೇಲಿಂದ ಜಿಗಿದು ಸಂದಿಗೊಂದಿಗಳಲ್ಲಿ ಚಿಲಿಪಿಲಿಗುಟ್ಟುತ್ತಿದ್ದ ಎರಡೇ ಗುಬ್ಬಚ್ಚಿಗಳ ಕೊಕ್ಕನ್ನಷ್ಟೇ ತೋಯಿಸಿ ಕೆಳಗಿನ ಗೂಡಂಗಡಿಯವನ ಚಹಾ ಕೆಟಲಿನ ಮೇಲೆಯೇ ಬೀಳುತ್ತದೆ.ಹೊರಗಿಟ್ಟ ಬಿಂದಿಗೆಯ ಮೇಲೆಲ್ಲ ಬರ್ರನೆ ಸುರಿಯುತ್ತದೆ.ಒಬ್ಬಂಟಿ ಹುಡುಗನ ಕನಸಿನಲ್ಲಿನ ಬಾಡಿದ ಹೂವಿನ ಮೇಲೆಲ್ಲ ಬಿದ್ದು ಪ್ರೀತಿ ಚಿಗುರಿಸುತ್ತದೆ,ಒಣಗಿಹೋದ ಹೂಗಿಡದ ಎಲೆಯಮೇಲಿಂದ ಜಾರಿ ಬುಡದಲ್ಲಿ ಇಲ್ಲದಂತೆ ಮಾಯವಾಗುತ್ತದೆ.ಕೈಚಾಚಿ ನಿಂತ ಸಾವಿರ ಕಟ್ಟಡಗಳಿಂದ ತಪ್ಪಿಸಿಕೊಂಡು ಫ್ಲೋರು-ಫ್ಲೋರುಗಳನ್ನು ನೋಡದೇ ಲಿಫ್ಟಿನಲ್ಲಿ ಜಾರಿ ಬಂದವರನ್ನೂ,ಕಾಫಿಡೇಯಲ್ಲಿ ತಾಸು ಕೂತುಬಂದವರನ್ನೂ,ಎಲ್ಲ ಬಣ್ಣದಂಗಿಯಲ್ಲಿದ್ದರೂ ಕಾಣದ ಕಟ್ಟಡದ ಕೂಲಿಗಳನ್ನೂ ಬಿಡದೇ ತೋಯಿಸಿ ಹೆದ್ದಾರಿಯಲ್ಲಿ ಎಲ್ಲ ರಾಡಿಗಳನ್ನೂ ತೊಳೆಯುತ್ತ ಹರಿಯುತ್ತದೆ.ಗುಲಾಬಿ ಚಪ್ಪಲಿಗೆ ಹಳದಿ ಅಂಗಿಯನ್ನು ಜೊತೆ ಮಾಡುತ್ತದೆ.
ಶಾಲೆ ಬಿಟ್ಟು ದಾರಿತುಂಬ ಕೇಕೆ ಹಾಕಿ ನಡೆದಿದ್ದ ನೀಲಿ ಅಂಗಿಗಳ ಪಾಟೀಚೀಲಗಳನ್ನು ತೋಯಿಸುತ್ತದೆ,ಪಾಟೀಚೀಲದಲ್ಲಿನ ಡ್ರಾಯಿಂಗು ಪುಸ್ತಕದ ಸ್ಕೆಚ್ಪೆನ್ನಿನ ಚಿತ್ರವನ್ನು ಹುಡುಕಿ ಕೆಂಬಣ್ಣದ ಮನೆಯನ್ನೂ ನೀಲಿ ಆಕಾಶವನ್ನೂ ಒಂದುಮಾಡುತ್ತದೆ,ಜಗಳ ಮಾಡಿಕೊಂಡ ಟಾಮೆಂಜರಿಗಳ ಬಾಲಗಳಾನ್ನು ಜೋಡಿಸುತ್ತದೆ,ಪಾಟೀಚೀಲಗಳನ್ನು ಎದೆಗವಚಿಕೊಂಡು ಓಡುವ ಹುಡುಗರಿಗೆಂದೇ ತಗೋ ಎಂದು ಆಡುಮಾವಿನ ಹಣ್ಣುಗಳನ್ನು ರಾಶಿ ರಾಶಿ ಬೀಳಿಸುತ್ತದೆ.ಬಿಸಿಲಲ್ಲಿ ಸುಡುತ್ತ ನಿಂತ ಗೋಡೆಯ ಚಿತ್ರಗಳನ್ನೆಲ್ಲ ತೋಯಿಸುತ್ತದೆ.ರಸ್ತೆಬದಿಯ ತುಂಬ ಬೊಂಬೆಗಳನ್ನು ಹರಡಿಕೊಂಡು ಕೂತವನನ್ನು ಪಜೀತಿಗಿಟ್ಟು ಕಾಡುತ್ತದೆ,ಬಿಸಿಲಿಗೆ ಕರಗಿದ ಕರಿಡಾಂಬರೂ ಈ ಮಳೆಗೆ ಕಾತರಿಸುತ್ತದೆ.ಬಸ್ಸ್ಟ್ಯಾಂಡಿನ ಬೆಂಚುಗಳನೆಲ್ಲ ತೋಯಿಸಿ ದಪ್ಪದಪ್ಪ ಹೆಂಗಸರನೆಲ್ಲ ಕಾಯಲು ನಿಲ್ಲಿಸುತ್ತದೆ. ಗಾಡಿಗಳ ಅವಸರಕ್ಕೆ ಎದ್ದು ಹೊಗೆಯಾಡುವ ಧೂಳನ್ನೆಲ್ಲ ಕೂತ್ಕೋ ಸುಮ್ಮನೆ ಎಂದು ಕೂರಿಸಿ ಮೊದಲ ಮಣ್ಣ ಕಂಪನ್ನು ಹರಡುತ್ತದೆ.ಮದುವೆ ಚಪ್ಪರದ ಒಳಗೆ ಹುಡುಗಿಯರನ್ನು ಹುಡುಕಿ ಸಣ್ಣಗೆ ಹಣುಕುತ್ತದೆ. ತಾರಸಿಯ ಮೇಲೆ ಗರಿಗರಿ ಒಣಗಿದ ಹಸಿರು,ಕೆಂಪು, ನೀಲಿ ಬಟ್ಟೆಗಳನ್ನು ರಪಾರಪಾ ತೋಯಿಸುತ್ತದೆ,ಅಮ್ಮನ ಪಕ್ಕ ಕುಳಿತ ಎರಡು ಜಡೆಯ ಪುಟ್ಟಿಯನ್ನು ಬಾಗಿ ಮುತ್ತಿಕ್ಕುತ್ತದೆ. ವರ್ಷಕ್ಕೊಂದೇ ಪಾರ್ಟಿ ಕೊಡಿಸುವ ಗೆಳೆಯ ಈ ಬಾರಿಯೂ ಬಚಾವಾಗುವಂತೆ ಮಾಡಿಬಿಡುತ್ತದೆ.ನಾಲ್ವರಿದ್ದರೆ ಮಾಡಿನ ತುಂಬ ಗದ್ದಲ, ಇಬ್ಬರಿದ್ದರೆ ಹಂಚಿಕೋ ಪ್ರೀತಿ.ಇಲ್ಲಿ ದೊಡ್ಡದೊಡ್ಡ ಹನಿಗಳ ಮಳೆ ಕಣೇ ಎಂದು ಗೆಳತಿಗೆ ಮರೆಯದೇ ಹೇಳಬೇಕೆನಿಸುತ್ತದೆ,ನಾನೂ ಬರುತ್ತೇನೆ ಕಣೋ ಎಂದು ರಚ್ಚೆಹಿಡಿಯಲಿ ಎಂಬ ಆಸೆ.ಏಕೆಂದರೆ ಈ ಮಳೇಯೇ ಹಾಗೆ.ಈಗತಾನೆ ಬಿದ್ದಮಳೆ ಕನಸೆಂಬಂತೆ ಇಲ್ಲವಾಗುತ್ತದೆ.ದೋಣಿಮಾಡಿ ಬಿಡುವ ಹಾಗೆ ಸುರಿಯದಿದ್ದರೂ ಮೇ ತಿಂಗಳ ಮಳೇಯೇ ಕೇಳಿಸಿಕೋ ನಾನು ನಿನ್ನನ್ನು ಪ್ರೀತಿಸುತ್ತೇನೆ.
('ವಿಜಯ ಕರ್ನಾಟಕ'ದ ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟವಾದ ಬರಹ )
03 May, 2011
ಒಂದೇ ಬಸ್ಸಿನಲ್ಲಿ
ಸಪಾಟು ಬೀದಿಯೆಲ್ಲ
ಬಾಗಿಲು ಮೆಟ್ಟಿಲು ಅಂತ ತುಂಬಿದೆ
ಒಂದೇ ಕಡೆ ಇದ್ದವರು,ಇಲ್ಲಿ ಇಲ್ಲದವರು
ಪಾತ್ರೆ ಪಗಡಿ ಟಿಕಲಿ ಬಾಕ್ಸು
ಅಂತ ಬೇರೆ ಮನೆಮಾಡಿಕೊಂಡು
ಉಣ್ಣುತ್ತಿದ್ದಾರೆ.
ಈ ಗೋಡೆಗೂ ಎಂಥ ತಾಕತ್ತು ನೋಡಿ
ಅದರದ್ದೇ ಅಕ್ಕಪಕ್ಕ
ಎಲ್ಲ ಬದಲಾಗಿಬಿಡುತ್ತದೆ
ಆ ಕಡೆ ನಿಮ್ಮ ಫೆಮಿಲಿ
ಈಕಡೆ ನಮ್ಮದು
ಮಾತು ಮುಗಿದಾಗ ಅಗುಳಿ ಹಾಕಿಕೊಳ್ಳಿ
ಕದತೆರೆದವರು ನೆನಪುಮಾಡಿಕೊಂಡು
ನಕ್ಕರೆ ನೆನಪು ಇಲ್ಲವಾದರೆ ಯಾರೋ
ಯಾರ ನೆನಪನ್ನು ಯಾರು ಇಟ್ಟುಕೊಳ್ಳಬೇಕು
ಗಂಡ ಹೆಂಡತಿ
ಪ್ರೀತಿಯಿಂದ ಮಾತನಾಡಿ ವರ್ಷವಾಯಿತು
ಒಂದೇ ಮಾಡಿನ ಕೆಳಗಿದ್ದಾರೆ ಎಂಬುದು ನಿಜ
ಒಂದೇ ರೇಖೆಯ ಮೇಲೆ ನಡೆಯುವುದು ಕಷ್ಟಾ ಮಾರಾಯ
ಒಂದೊಂದಾಗಿ ಬಾಗಿಲ ಮರೆಯಿಂದ
ಹೊರಬಂದವರು
ಹೊಸ ಶರ್ಟು-ಪ್ಯಾಂಟು
ಅಂದುಕೊಂಡರೆ ಹೊಸಾ ಮುಖ
ಇಲ್ಲವಾದರೆ ಅದೇ ಹಳತು
ಅದೋ ಅವನ ಕೈಲಿ ಹಳೇ ಮೈಸೂರು ಸಿಲ್ಕಿನ ಪ್ಲಾಸ್ಟಿಕ್ ಕೊಟ್ಟೆ
ಹಿಂದಿನವನ ಕೈಲಿ ರೇಡಿಯೋದಂಥ ಮೊಬೈಲು
ವಾಲುವವನ ಕಣ್ಣಲ್ಲಿ ನಿನ್ನೆ ರಾತ್ರಿಯದೆ ತೇಲುವ ಜಗತ್ತು
ಕಸ ಹೊಡಿಯುತ್ತಿದ್ದವರನ್ನು ನುಣುಪಾಗಿ ದಾಟಿ
ಮಾಯವಾಗುತ್ತಿದ್ದಾರೆ ಕಪ್ಪು ಬೂಟಿನ ಮಂದಿ
ತಳ್ಳುಗಾಡಿಯ ಹುಡುಗ ಎಡಗಾಲಿನ ಹವಾಯಿ ಚಪ್ಪಲಿ ಹುಡುಕುತ್ತಿದ್ದಾನೆ
ಪಾಟೀಚೀಲ ಹಿಡಿದ ಅಮ್ಮ ಕಾಳಜಿ ಮಾಡಿದರೆ
ದೊಡ್ಡವನಾಗಿದ್ದೇನೆ ಎಂದು ಕೈ ಜಾರಿಸಿಕೊಂಡು
ಕೆಂಪುಚಡ್ಡಿಯ ಹುಡುಗ ರಸ್ತೆ ದಾಟುತ್ತಾನೆ
ಗ್ಯಾಸಿನವನು ಹತ್ತು ರುಪಾಯಿ ಕಡಿಮೆ ಅಂತ ತಗೊಂಡಿದಾನೆ
ಒಂದೇ ಬಸ್ಸಿನಲ್ಲಿ ಹೋಗಿದ್ವಿ ಅಂತ ನಕ್ಕಿದ್ದಾನೆ
ಅಲ್ಲಿ ಮೇಲೆ ಹಬ್ಬಿದ
ವಾಯರನ್ನು ಹಿಡಿದು ನಡೆದರೆ ಎಲ್ಲರೂ ನಮ್ಮವರೇ
ಬೋರಿಸರ ಅಪ್ಪ ಮಾಡಿಸಿದ್ದಲ್ವೆ
ನಮ್ಮನೆಯವರೇ ಹಬ್ಬಕ್ಕೆ ಕೊಡಿಸಿದ್ದು
ಎಂದು ನಾಚಿದ್ದಾಳೆ
ಆ ಗೋಡೆ ಈ ಗೋಡೆಯ ನಡುವೆ ನಿಂತು
ಬೇರೆ ಗೋಡೆಯ ಜನರ ಬಗ್ಗೆ ಹಂಗಂತೆ ಮಾರಾಯ್ತಿ
ಅಂತ ಕತೆ ಹೇಳಿ ಬಾಗಿಲು ಹಾಕಿಕೊಂಡು ಟಿವಿ ಹಚ್ಚಿದ್ದಾರೆ.
ಬುಧ್ಧಿವಂತನಂತೆ ಮಾರಾಯ ನೀನು
ಪ್ರೀತಿಗೀತಿ ಅಂತೆಲ್ಲ ಆಡ್ತಾರೆ ಎಲ್ಲ ಹಾರ್ಮೋನು
ಅಂತ ನಗುವುದಿದೆಯಲ್ಲ-
ಸೂಪರ್ನೋವಾ,ಕಪ್ಪು ರಂದ್ರ ಅಂತೆಲ್ಲ ಲೆಕ್ಚರ್ ಕೊಡಬೇಡ
ಒಂದು ಸಾರಿಯಾದರೂ ಶುದ್ಧ ನಕ್ಷತ್ರಗಳನ್ನು ನೋಡು.
01 March, 2011
Subscribe to:
Comments (Atom)














































