25 October, 2010

ತೊಟ್ಟ ಬಟ್ಟೆ ಇಷ್ಟೂ ಕೆಡದ ಹಾಗೆ




ಕಸ ಹಾಕಲು ಬರುತ್ತಾರೆ  ಜನ
ತಿಂದು ಉಳಿದ ಮುಸುರೆ  
ಎಲ್ಲೋ ಕಸಿದ ತಿನಿಸು
ಬಿಸ್ಕತ್ತು ಕೊಟ್ಟೆ ಚೆಲ್ಲಾಪಿಲ್ಲಿ

ಉಟ್ಟ ಬಿಟ್ಟ ಸೀರೆ ಅಂಗಿ
 ಹರುಕು ಮುರುಕು ಮಂಡೆಕಸ
ಬಾಟ್ಲಿ,ಪಾರ್ಟಿ ಫ್ಯಾಷನ್ನು
ಮಾಡಿಬಿಟ್ಟ ಹೊಲಸನೆಲ್ಲ

ನಕಲಿ ನೋಟು, ತನಿಕೆ
ಫೈಲು ನ್ಯೂಸು ಪೇಪರ್ರು
ಮೆಟ್ಟಿ ಕೊಂದ ಯಾರದೋ ಕೈ
ಬಸಿದ ಉಸಿರು,ಫಳಫಳ
ಹೊಳೆವ ಹಳೆಯ ಭಾಷೆಯನೆಲ್ಲ

ಶಸ್ತ್ರ ಅಸ್ತ್ರ ಔಷ್ದಿ ಗಿವ್ಸ್ಡಿ
ಶವದ ಪೆಟ್ಟಿಗೆಗೆ ಜಾಸ್ತಿ ಕಮ್ಮಿ                                        
ಮುರುಕು ಚಪ್ಲಿ
ಹರಿದ ದೈನಿಕದ ತುಂಡು
ಉಳಿದುಕೊಂಡ ಪೌರುಷತ್ವದ ಟಾನಿಕ್ಕುಗಳನೆಲ್ಲ


 ಹೊಲಸು ಬೂದಿ ಒಲೆಯ ತುಂಬ
ಸುಳ್ಳು ಸೆಡವು ಉದ್ಧಾರದ
ಮಾತು ರಾಜಕೀಯ

ಜನ ಕಸ ಎಸೆಯಲು ಬರುತ್ತಿದ್ದಾರೆ

ಗವ್ವನೆಂಬ ಕತ್ತಲಲ್ಲಿ
ಸಂಜೆ ನಸುಕಿನಲ್ಲಿ
ಕೆಂಪು ಕೆಸರು ಮರೆತ ಹೆಸರು
ಭಿಕ್ಷೆ, ಸಾಲದ ಪತ್ರ ಎಲ್ಲವನ್ನು
ಹೊರಗೆ ಚೆಲ್ಲಿಬಿಟ್ಟರೆ
ನಮ್ಮ ಮನೆ ಎಷ್ಟು ಸ್ವಚ್ಛ

ಗಡಿಯ ತಂಟೆಯಲ್ಲಿ
ಒಡೆದ ಕನ್ನಡಿ ಹಿಡಿದು
ಗಗನಚುಂಬಿಗಳ ಸಂದಣಿಯಿಂದ
ಹೋರಾಡಿ ಗಳಿಸಿಕೊಂಡ
ಜೀವವಿಲ್ಲದ ತಮ್ಮವೇ
ಅಕ್ಷರಗಳನ್ನು ಮುಚ್ಚಿತಂದು
ಎಸೆದು ಹೋಗುತ್ತಾರೆ

ಅನರ್ಥವೆಂದು ಕಂಡ ಕನಸನೆಲ್ಲ,
ಆಸೆ ನಿರಾಸೆಗಳೊಳಗೆ ತಪ್ಪಿಹೋದ
ವಿಳಾಸಗಳನೆಲ್ಲ,

ನಾಳೆ ಎಸೆಯಲೋ
ಇನ್ನಷ್ಟು ಮಾಡಿಯೇ ಒಯ್ಯಲೋ
ಎನ್ನುತ್ತಾ ತೊಟ್ಟ ಬಟ್ಟೆ
ಇಷ್ಟೂ ಕೆಡದ ಹಾಗೆ
ಕಸ ಎಸೆಯಲು ಬರುತ್ತಾರೆ ಜನ
ವೆರಾಯಿಟಿ ವೆರಾಯಿಟಿ ಕಸ


















( 22 ಅಕ್ಟೋಬರ್,೨೦೧೦ರ ಕೆಂಡಸಂಪಿಗೆಯಲ್ಲಿ ಪ್ರಕಟಿತ )

2 comments:

Dr.D.T.Krishna Murthy. said...

ಕವಿತೆ ತುಂಬಾ ಚೆನ್ನಾಗಿದೆ.ನನ್ನ ಬ್ಲಾಗಿಗೆ ಒಮ್ಮೆ ಬನ್ನಿ.

Shiv said...

ವೆಂಕಟ್ರಮಣ,

ಓಹ್, ಅರ್ಥಪೂರ್ಣ ಕವನ.
ವಾಸ್ತವತೆಯ ಘಾಟು ಕವನದಲ್ಲಿ ಹೊಮ್ಮಿದೆ.